ಒಂದಿಷ್ಟು ಪ್ರೀತಿ ಮಾತು ....
ಮೊನ್ನೆ ಮೊನ್ನೆ ಊರಿಗೆ ಹೋದಾಗ ನನ್ನ ಹಳೆಯ ಗೆಳೆಯ ರವಿ ಪೇಟೆಯಲ್ಲಿ ಸಿಕ್ಕ.
ಅವನನ್ನಾ ನೋಡಿದ ಕೂಡಲೇ ನನಗೆ ಗೊತ್ತ ಆಗಲೇ ಇಲ್ಲ .. ಕೈಯಾಗ್ ಒಂದೆರಡು ಬ್ಯಾಗು, ಜೋಲುಬಿದ್ದ ಮುಖ , ಅವನನ್ನಾ ನೋಡಿ ಅಯ್ಯೋ ! ಇದೇನಿದು ನಮ್ಮ ರವಿ ಹಂಗೆ ಕಾಣಿಸ್ತಾನೆ ಅಂತ ಯೋಚನೆ ಮಾಡೋದ್ರಲ್ಲೇ . ಆತ ಕೂಡ ನನ್ನ ನೋಡೇ ಬಿಟ್ಟ. ಆದರೂ ಆತ ನನ್ನಾ ಮಾತಾಡಿಸಲೋ ಬೇಡೋ ಅಂತ ಯೋಚನೆ ಮಾಡ್ತಾ ಇದ್ದ ಅಂತ ಅನಿಸಾಕತ್ತಿತ್ತು . ನಾನು ಬಿಡೆ ಬಿಟ್ಟು ಮಾತನಾಡಿಸೆ ಬಿಟ್ಟೆ.. ಹೆಂಗಿದಿಯಪ್ಪಾ? ಏನು ಬಹಳ ದೊಡ್ಡ ಮನಶ್ಯಾ ಆಗಿ ನೋಡಪ್ಪ, ಒಂದು ಫೋನ್ ಮಾಡೋದಿಲ್ಲ ? ಅಂತ ದಬಾಯಿಸಿದೆ. ಆತ ನನ್ನ ನೋಡಿ ಚೆನ್ನಾಗಿ ಅದೆನಿ ನೋಡ್ರಿ, ಗುಂಡು ಕಲ್ಲಿನ ಹಾಗೆ ಅಂತ ಚುಟುಕಾದ ಉತ್ತರ ಕೊಟ್ಟ . ನಂಗೆ ಅವನ ಕಡೆಯಿಂದ ಬಹುವಚನದಾಗ ಉತ್ತರ ಕೇಳಿದಾಗ ಆತ ನನ್ನ ಚುಚ್ಚಿ ಚುಚ್ಚಿ ಮಾಡತಿದಂಗ ಅನಿಸ್ತದೆ ಅಂತ ಹೇಳಲೇನೋ ಅನಿಸಿದ್ರು ಅವನ ಮುಖ ಮತ್ತೆ ಅವಸ್ತೆ ನೋಡಿ ಸುಮ್ಮಗಾಗಿ ಬಿಟ್ಟೆ .
ನಾನು ಅವನನ್ನು ಕೊನೆಗೆ ನೋಡಿದ್ದು ೧೦ ವರ್ಷದ ಹಿಂದೆ ಕಾಲೇಜ್ ನ ಕೊನೆ ವರ್ಷದ ಸಮಾರಂಭದಲ್ಲಿ.. ಆಗ ಅವನನ್ನ ನೋಡಬೇಕಿತ್ತು. ಎಷ್ಟು ಮಾತಾಡ್ತಾ ಇದ್ದ ಅಂದರೆ, ನಾವೇ ಸಾಕಾಗಿ ನಿನ್ನ ಮಾತನ್ನ ನಿಲ್ಲಿಸಪ್ಪ ಅಂತ ಬೇಡಿಕೊಂಡದ್ದು ಇದೆ. ನನ್ನ ಜೊತೆ ಅಂತು ಊರಾಗಿಂದ ಇದ್ದದ್ದು ಇರಲಾರದ್ದು ವಿಚಾರ ಹೇಳಿ ತೆಲೆ ತಿಂತಿದ್ದ. ನನ್ನ ಜೊತೆ ಎಲ್ಲಾ ವಿಷಯ ಹೇಳದೆ ಇದ್ರೆ ಅವನಿಗೆ ತಿಂದ ಊಟ ಕರಗ್ತಾ ಇರಲಿಲ್ಲೋ ಏನೋ ! ಯಾವಾಗಲು ನಮ್ಮ ನಡುವೆ ಏಕವಚನದಲ್ಲಿ ಸಂಭಾಷಣೆ ನಡೀತಾ ಇತ್ತು, ನಮ್ಮಿಬ್ಬರ ನಡುವೆ ಅಷ್ಟೊಂದು ಸಲುಗೆ ಇತ್ತು. ಎಲ್ಲಾದರು ಹೊರಗೆ ಹೋಗಬೇಕಂದ್ರೆ ಇಬ್ಬರು ಸೇರಿ ಹೋಗ್ತಾ ಇದ್ವಿ. ಊಟ, ಸಿನಿಮಾ ,ಹರಟೆ,ಹುಡುಗಿರನ್ನಾ ಕಾಡುದರಲ್ಲಿ ಕೂಡಾ ನಮ್ಮ ಇಬ್ಬರದು ಸಮ-ಪಾಲಿತ್ತು.
ಈಗ ಆತ ನೋಡಿದ್ರೆ ನನ್ನ ಬಹುವಚನದಲ್ಲಿ ಮಾತಾಡಿ ಪೇಚಾಟದಲ್ಲಿ ಸಿಕ್ಕಿಸಿಬಿಟ್ಟ, ಆದರೂ ನಾನೆ ಸ್ವಲ್ಪ ಸುಧಾರಿಸಿಕೊಂಡು ಅವನನ್ನಾ ಏಕವಚನದಲ್ಲೇ ಮಾತಾಡಿಸಲಿಕ್ಕೆ ಶುರು ಮಾಡಿದೆ. ಎಷ್ಟೋ ಮಕ್ಕಳು ? ಅಂತ ಕೇಳಿದೆ . ಆತ ಫಿಲ್ಮಿ ಡೈಲಾಗ್ ಹೇಳಿದಂಗ "ಆರತಿಗೊಬ್ಬಳು ಮತ್ತೆ ಕೀರ್ತಿಗೊಬ್ಬ" ಇದ್ದಾರೆ ನೋಡಪ್ಪ ಅಂದ. ನಂಗ ಆತ ಹೇಳಿದ ಮಾತಿನ ಧಾಟಿ ಕೇಳಿ ನಗೆ ಬಂತು, ಆದರೂ ಬಹಳ ದಿನ ಅದ ಮೇಲೆ ಸಿಕ್ಯಾನ ಅಂತ ಅವನನ್ನೇನು ಹಂಗಿಸಲಿಲ್ಲ. ಮತ್ತೆ ಮನೆಗೆ ಕರಿತಿಯೋ ಇಲ್ವೋ ಅಂತ ನಾನೆ ಮಾತಿಗೆ ಏಳದೆ. ಅದಕ್ಕ ಆತ ನನ್ನ ನೋಡಿ ನಡಿಲಾ ಹೋಗೋಣ ನಿಂಗು ನಿಮ್ಮ ಅತ್ತೆನ ಪರಿಚಯ ಮಾಡಿಸ್ತೆನಿ ಅಂದ (ಸ್ವಲ್ಪ ಬಿಗು ಮನಸಿನಿಂದ) . ಅದನ್ನ ನೋಡಿ ನಾನು ಹಂಗೆ ಕೇಳಿದ್ದೆ ಮಾರಾಯಾ ಅಂತೆ ಸ್ವಲ್ಪ ಸುಧಾರಿಸಿದೆ. ಅಥವಾ ಅವನಿಗೆ ನನ್ನ ಮೇಲೆ ಸಿಟ್ಟು ಇದೆ ಅಂತ ಗೊತ್ತು ಆಗಲೇ ಇಲ್ಲಾ . ನಾನು ಅದನ್ನ ಮರೆಯಿಸಬೇಕಂತ ಅಲ್ಲೇ ಇರೋ ಕಾಮತ್ ಹೋಟೆಲ್ಗೆ ಹೋಗಿ ಸ್ವಲ್ಪ ಚಾ ಕುಡಿಯೋನು ಬಾ ಅಂತ ಹೇಳಿಅವನನ್ನಾ ಕರೆದುಕೊಂಡು ಹೋದೆ. ಚಾ ಕುಡಿಯುವಾಗ ಕೂಡ ಇಬ್ಬರ ನಡುವೆ ಕಾಟಾಚಾರಕ್ಕೆ ಮಾತನಾಡಿದ ಹಾಗೆ ಮಾತಾಡಿ ನಾನು ನನ್ನ ದಾರಿಯಲ್ಲಿ ಹೊರಟೆ ಅವನಿಗೆ ಬೈ ಬೈ ಹೇಳಿ.
ದಾರಿಯಲ್ಲಿ ಒಬ್ಬನೇ ಬರಬೇಕಾದರೆ ನಂಗೆ ಅನಿಸ್ತಾ ಇತ್ತು . ಯಾಕೆ ಹೀಗಾಗುತ್ತೆ ? ಛೆ! ಅವನು ತುಂಬಾ ಬದಲಾಗಿ ಬಿಟ್ಟಿದ್ದಾನೆ. ಮೊದಲಿನ ಹಾಗಿಲ್ಲ. ಸರಿಯಾಗಿ ಕೂಡ ಮಾತಾಡ್ತಾ ಇಲ್ಲಾ ನನ್ನ ಜೊತೆ. ನಂಗೆ ಅವನ ಮೇಲೆ ಸಿಟ್ಟು ಬಂತು, ಆಮೇಲೆ ಸ್ವಲ್ಪ ಯೋಚನೆ ಮಾಡಿದೆ. ಅದರಲ್ಲಿ ಅವನದೇನು ತಪ್ಪಿದೆ ನಾನು ಕೂಡ ತಪ್ಪು ಮಾಡಿದ್ದೇನು ಅನಿಸ್ತಾ ಇತ್ತು . ಇವತ್ತು ಫೋನ್ ದರ ಇಷ್ಟು ಕಡಿಮೆ ಇದ್ದರು ಅವನಿಗೆ ಒಂದು ಸಲ ಕೂಡ ಕರೆ ಮಾಡಿರಲಿಲ್ಲ, ಕಳೆದ ೬ ವರ್ಷದಲ್ಲಿ ಒಂದು ಸಲ ಕೂಡ ಅವರ ಮನೆಗೆ ಹೋಗಿ ಬಂದಿರಲಿಲ್ಲ. ಆಗ ಅನಿಸ್ತಾ ಇತ್ತು ಜೀವನ ಎಷ್ಟು ವಿಚಿತ್ರ ಇದೆಯಲ್ಲ ಅಂತ. ಕಾಲೇಜ್ ಟೈಮ್ ನಲ್ಲಿ ಎಂದು ಕೂಡ ಬಿಟ್ತಿರದವರು ಈಗ ಮುಂದೆ ಬಂದಾಗ ಕೂಡ ಸರಿಯಾಗಿ ಮಾತಾಡಲಿಕ್ಕೆ ಆಗಲಿಲ್ಲ ಅಂತ ಅನಿಸಿ ದುಖ: ಆಯಿತು. ಕಾಲ ಎಲ್ಲದನ್ನು ಮರೆಸುತ್ತೆ ಅಂತ ಕೇಳಿದ್ದೆ ಆದರೆ ನಮ್ಮಲ್ಲಿರೋ ಭಾವನೆ ಮತ್ತೆ ನೆನಪು ಮರೆಯೋದು ಎಷ್ಟು ಕಷ್ಟ ಅಂತ ಭಾವನೆ ಬಂತು. ಮೊದಲನೇ ಸಾರಿ ನಾನು ಮಾಡಿದ ತಪ್ಪಿನ ಬಗ್ಗೆ ನನಗೆ ಕೆಟ್ಟು ಅನಿಸ್ತಾ ಇತ್ತು. ನನ್ನ ತಪ್ಪನ್ನ ಸ್ವಲ್ಪ ಮಟ್ಟಿಗೆ ಆದರೂ ಸುಧಾರಿಸಿಕೊಳ್ಳೋಣ ಅಂತ ನಿರ್ಧರಿಸಿ ರವಿಗೆ ಮನೆಗೆ ಬರ್ತೇನಿ ಅಂತಹೇಳಿ ಅಲ್ಲೇ ಇರೋ ಸ್ವೀಟ್ ಅಂಗಡಿಗೆ ಹೋಗಿ ೧/೨ ಕಿಲೋ ಸ್ವೀಟ್ ತಗೊಂಡು ಅವರ ಮನೆಯ ಕಡೆಗೆ ನಡೆದೆ.
No comments:
Post a Comment